Tuesday, February 1, 2022

'ನನ್ನ ತೇಜಸ್ವಿ' - ಓದಿದ್ದು ಅನ್ಸಿದ್ದು

 


                                                                                        ಸಂದೀಪ್ ಎಸ್ ರಾವಣೀಕರ್

                

     "ನನ್ನ ತೇಜಸ್ವಿ" ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದಿರುವ ತೇಜಸ್ವಿ ಎಂಬ ಮೇರು ವ್ಯಕ್ತಿತ್ವದ ವೈಯಕ್ತಿಕ ಬದುಕನ್ನು ತೆರೆದಿಡುವ ಅಪರೂಪದ ಪುಸ್ತಕ. ತೇಜಸ್ವಿಯ ಬಗೆಗೆ ಕೇಳಿ ತಿಳಿದು, ಓದಿ ಅರಿತು ಒಂದಷ್ಟು ಪ್ರಭಾವಕ್ಕೆ ಒಳಗಾಗಿರುವೆ. ಆದರೆ ವ್ಯಕ್ತಿ ಅದೇಗೆ ಬದುಕಿದ್ದರು? ಅದೇಗೆ ಅಷ್ಟೆಲ್ಲಾ ವಿಷಯಗಳನ್ನು ಅರಿತಿದ್ದರು? ಅವರ ತಿರುಗಾಟಗಳೇನು? ಹವ್ಯಾಸಗಳೇನು? ಸಹಪಾಠಿ ಮತ್ತು ಸಹವಾಸಿಗಳಾರು? ಎಂಬಿತ್ಯಾದಿ ಹಲವುಗಳನ್ನು ಚಿಕ್ಕಂದಿನಿಂದ ಬದುಕಿನ ಕೊನೆ ದಿನಗಳವರೆಗೆ ಅವರನ್ನು ತಿಳಿಯುವ ಹೆಬ್ಬಯಕೆಯನ್ನು ತೇಜಸ್ವಿಯವರು ಓದುಗರೊಟ್ಟಿಗೆ ಇರುವರೆಂಬಂತೆಯೇ ಮೇಡಂ ಈ ಪುಸ್ತಕದ ಮೂಲಕ ಪೂರ್ಣಗೊಳಿಸಿದ್ದಾರೆ.

          ಮೇಡಂ ರವರು ಹೇಳಿರುವಂತೆ, ವಿದ್ಯಾರ್ಥಿ ಕಾಲದಿಂದಲೇ ವ್ಯಕ್ತಿತ್ವ, ಬರಹ ಮತ್ತು ವಿಚಾರಗಳಿಂದ ಮಹಾರಾಜ ಕಾಲೇಜಿನ ಕ್ಯಾಂಪಸ್ ನಲ್ಲಿ ತೇಜಸ್ವಿಯವರದ್ದೇ ಮಾತು. ಕಾರಣಕ್ಕೋ ಏನೋ ತೇಜಸ್ವಿಯವರ ಪ್ರಭಾವ ರಾಜೇಶ್ವರಿ ಮೇಡಂರವರ ಮೇಲೆ ಗೊತ್ತಾಗದಂತೆ ಆವರಿಸುತ್ತದೆ. ಸ್ನೇಹಿತ/ತೆಯರಾಗಿ ಪರಿಚಿತರಾಗುವ ಇಬ್ಬರು ದಿನಕಳೆದಂತೆ ಪ್ರೀತಿಗೊಳಗಾಗುತ್ತಾರೆ. ಅಂದಿನ ಪರಿಸ್ಥಿತಿಯಲ್ಲಿ ಅವರಿಗಿದ್ದ ಒಂದೇ ಸಂವಹನ ಸಾಧನ ಅಂದರೆ, ಪತ್ರ ವಿನಿಮಯ. ಅಂತೆಯೇ ಅದೆಷ್ಟೋ ವೈಯಕ್ತಿಕ ವಿಚಾರಗಳ ಪತ್ರಗಳನ್ನು ಪುಸ್ತಕದಲ್ಲಿ ಯಥಾವತ್ತಾಗಿ ಮುದ್ರಿಸಲಾಗಿದೆ. ಇವರ ಜಾತಿ ಮೀರಿದ ಮದುವೆಗೆ ಎರಡು ಕುಟುಂಬದವರು ನೀಡುವ ಒಪ್ಪಿಗೆ, ಹಾಗೆ ಕುವೆಂಪುರವರು ಸಿದ್ಧಪಡಿಸಿದ ಸರಳ ಮತ್ತು ಮೊತ್ತಮೊದಲ "ಮಂತ್ರ ಮಾಂಗಲ್ಯ" ಮದುವೆ ಸಂದರ್ಭವನ್ನು ಓದುವಾಗ ಮದುವೆಯಲ್ಲಿ ನಾವು ಇದ್ದವೆಂಬ ಅನುಭವವಾಗುವುದು.

          ಯಾವುದೇ ಕೆಲಸಕ್ಕೂ ಸೇರದ ತೇಜಸ್ವಿಯವರು ಮತ್ತು ಅವರ ಆಸೆಯಂತೆ ಮಾಡುವ ಕಾಡಿನ ಸಂಗ, ದಿನಂಪ್ರತಿ ನಡೆಯುವ ಶಿಕಾರಿ ಅದಕ್ಕೆ ಜೊತೆಯಾಗುವ ಕಿವಿ (ನಾಯಿ), ಅಚ್ಚುಕಟ್ಟಾಗಿಸುವ ತೋಟದ ಕಾರ್ಯ, ಒಂದಷ್ಟು ಕಾಡು-ಮೇಡುಗಳ ಅಲೆದಾಟ, ದೂರದೂರಿಗೆ ತಮ್ಮದೇ ಸ್ಕೂಟರ್ ಕಾರ್ ಗಳಲ್ಲಿ ಜೊತೆಗೂಡಿ ಹೋಗುವ ಸಂದರ್ಭಗಳು ಒಂದೆಡೆಯಾದರೆ,ಬಂಧು-ಸ್ನೇಹಿತರುಗಳ ಮನೆಗೆ ಹೋಗುವ ಮತ್ತು ಇವರ ಮನೆಗೆ ಬರುವವರ ಸತ್ಕಾರ ಹೀಗೆ, ವಯಕ್ತಿಕವಾಗಿ ತೇಜಸ್ವಿ ತಮ್ಮಿಷ್ಟದಂತೆ ಕಳೆದುಹೋಗುತ್ತಾರೆ.

          ಜೆ.ಪಿ ಪ್ರಭಾವ ಮತ್ತು ಚಳುವಳಿ, ಕೃಷಿಕರ ಸಮಸ್ಯೆಗಳ ಸುತ್ತ ಚರ್ಚೆ ಮತ್ತು ಅರಿವು ಕಾರ್ಯಕ್ರಮಗಳು, ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ನೀಡಲು ಯುವಪಡೆ ನಿರ್ಮಾಣ, ಹಲವು ವಿಷಯಗಳ ಚರ್ಚೆಗಳಿಗಾಗಿಯೇ ಹಾಜರಾಗುವ ಅಭಿಮಾನಿಗಳು, ಕರ್ನಾಟಕದ ಮೂರನೇ ರಾಜಕೀಯ ಶಕ್ತಿಯಾಗಿ "ಕರ್ನಾಟಕ ಪ್ರಗತಿರಂಗ" ಶುರುವಿಗೆ ಚರ್ಚೆ ಹಾಗೂ ಯಾವುದೇ ಮರ್ಜಿಗೆ ಒಳಗಾಗದೆ ಸಾಮಾಜಿಕ ಮೌಲ್ಯವನ್ನು ಮತ್ತು ಸರಿ ಅನಿಸುವ ಕಾರ್ಯಗಳಿಗೆ ಅಂದಿನ ಜೊತೆಗಾರರು ಒಡಗೂಡಿ ಎಲ್ಲರನ್ನೂ ಎಚ್ಚರಿಸುವ, ಸಂಘಟಿಸುವ ಕಾರ್ಯಕ್ರಮಗಳಿಗೇನು ಕಡಿಮೆ ಇಲ್ಲದಂತೆ ಪ್ರತಿಯೊಂದನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

        ಹೊಸ ಪ್ರಯೋಗಳೆಂಬಂತೆ ಪ್ರಕಾಶನ ಪ್ರಾರಂಭ, ಕನ್ನಡ ನುಡಿಯನ್ನು ಗಣಕೀಕರಣಗೊಳಿಸಲು ನಡೆಸುವ ಪ್ರಯತ್ನಗಳು, ಫೋಟೊಗ್ರಫಿಗಾಗಿ ಕೊಂಡ ಹಳತು-ಹೊಸತು ಕ್ಯಾಮೆರಾಗಳು, ಆಗಾಗ ಬದಲಾಗುವ ಕಾರುಗಳ ಸಮೇತ ಅವರ ಹವ್ಯಾಸಿ ಕಾರ್ಯಗಳು ಇಲ್ಲಿ ಸಿಗುತ್ತವೆ.

       ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕೆಂಬ ನಿರ್ಧಾರ, ಮಕ್ಕಳ ಇಷ್ಟದನ್ವಯ ಮತ್ತು ಅನೇಕ ಸ್ನೇಹಿತರ ಅಪೇಕ್ಷೆಯಂತೆ ಆಗುವ ಮಂತ್ರ ಮಾಂಗಲ್ಯದ ಅಂತರ್ಜಾತಿ ವಿವಾಹಗಳು, ಆಗಾಗ ಉದಯರವಿ ಮತ್ತು ನಿರುತ್ತರ ಮನೆಗಳಲ್ಲಿ ಸೇರುವ ಕುಟುಂಬ ಕೂಟಗಳು, ಇಷ್ಟದ ಅಡುಗೆಯ ಸುತ್ತಲಿನ ಮಾತುಕತೆ ಹಾಗೂ ಕುವೆಂಪುತಾಯಿ ಮತ್ತು ಒಡಹುಟ್ಟವರ ಒಡನಾಟಗಳು ಆಗಾಗ ಇಲ್ಲಿ ಪುನರ್ವರ್ತಿಸುತ್ತವೆ.

    ಇಷ್ಟಕ್ಕನುಗುಣವಾಗಿ ಜೀವಿಸುವ ತೇಜಸ್ವಿಯವರು ಒಂದಷ್ಟು ಆರೋಗ್ಯ ಏರುಪೇರುಗಳನ್ನು ಸಹ ಕಂಡು ಸುಧಾರಿಸಿಕೊಂಡರು. ಒಡನಾಟ-ಕ್ರಿಯಾಶೀಲತೆಯು ಮತ್ತೆ ಮರುಕಳಿಸುವಂತಾಗಲು ಮೊಮ್ಮಕ್ಕಳು ಜೊತೆಯಾಗುತ್ತಾರೆ. ತನ್ನನ್ನು ಏನೆಂದುಕೊಳ್ಳುತ್ತಾರೋ ಎಂಬ ಯಾವ ಅಂಜಿಕೆಯೂ ಇವರಿಗಿದ್ದಿಲ್ಲ. ಅವತ್ತಿನ ಪ್ರಧಾನಿ ಮನೆಗೆ ಬರುವುದನ್ನು ಬೇಡ ಅಂತ ಹೇಳಿದಾಗಲೂ ಮತ್ತು ಅವರನ್ನರಸಿ ಬಂದ ಅಷ್ಟು ಪ್ರಶಸ್ತಿಗಳನ್ನು ಸ್ವೀಕರಿಸದೆ ಇದ್ದಾಗಲೂ ಅವರು ಅವರಂತೆಯೇ ಇದ್ದಿದ್ದು ಅವರ ಸ್ವಂತಿಕೆಗೆ ಹಿಡಿದ ಕನ್ನಡಿ. ಇದ್ದ ನಿಯಮಿತ ವ್ಯಾಪ್ತಿಯಿಂದ ಬಹು ವಿಷಯವನ್ನು ಮುಟ್ಟಿದ ತೇಜಸ್ವಿಯವರ ಇಂದಿನ ಅನುಪಸ್ಥಿತಿ ಈಗ ಬಹುವಾಗಿ ಕಾಡದೆ ಇರದು.