Wednesday, May 5, 2021

ಆಕ್ಸಿಜನ್ - ಈ ಹೊತ್ತಿನ ಸಂಜೀವಿನಿ

ಸಂದೀಪ್ ಎಸ್ ರಾವಣೀಕರ್



    ಅರಿವಿಲ್ಲದೆಯೇ ಉಸಿರಾಡುತ್ತಿದ್ದ ಪ್ರತಿಯೊಬ್ಬರು, ಇಂದು ಹೌದು ನಾವು  ಉಸಿರಾಡುತ್ತಿರುವುದು ಆಕ್ಸಿಜನ್ನೇ ಎಂದು ಉದ್ಗರಿಸುತ್ತಿದ್ದಾರೆ.  ಆಮ್ಲಜನಕವು, ಜೀವವಾಯು - ಪ್ರಾಣವಾಯು ಎಂಥೆಲ್ಲಾ ಪ್ರೈಮರಿ ಸ್ಕೂಲ್ ನಿಂದಲೂ ಓದಿದ್ದ ನಾವು, ಪ್ರತಿದಿನ ಒಂದು ಅಂದಾಜಿನ ಪ್ರಕಾರ 20,000 ದಿಂದ 22,000 ಬಾರಿ ಉಸಿರಾಡುತ್ತಲೇ ಇರುತ್ತೇವೆ. ನಮಗೆ ಗೊತ್ತಿಲ್ಲದೆಯೇ ನಡೆಯುವ ಪ್ರಕ್ರಿಯೆಯು ನಮ್ಮಗಳ ಬದುಕಿನ ಮಹಾ ಪ್ರಾಣ ವಾಯುವಾಗಿರುವುದಂತು ಸತ್ಯ.

      ಆದರೆ, ಇಂಥಹ ಮಹಾ ಪ್ರಾಣವಾಯುವಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಕೊರೋನಾದಂತಹ ಒಂದು ವರ್ಷದ ಹಳೆಯ ಕಾಯಿಲೆಯು ಇಂದು ಉಸಿರಾಡುವುದಕ್ಕೂ ಕೃತಕ ಆಮ್ಲಜನಕದ ಮೊರೆಹೋಗುವಂತೆ ಮಾಡುತ್ತಿದೆ. 2020 ಮೊದಲ ಕೊರೋನ ಅಲೆಯು ಭಾರತದ ಮಟ್ಟಿಗೆ ಅಷ್ಟೇನು ಗಂಭೀರ ಸ್ವರೂಪದ್ದಾಗಿರಲಿಲ್ಲವಾದರೂ, ತನ್ನ ಉಳಿವಿಗಾಗಿ ಕರೋನ ವೈರಸ್, ಹೊಸ ರೂಪದೊಂದಿಗೆ 2021 ಹೊತ್ತಲ್ಲಿ ಎರಡನೆಯ ಅಲೆಯು ಮಾರಣಾಂತಿಕವಾಗಿ ಇಡೀ ಭಾರತಕ್ಕೆ ಅಪ್ಪಳಿಸಿದೆಅವ್ಯವಸ್ಥೆಗಳೊಟ್ಟಿಗೆ ಭಾರತವನ್ನು ಲಾಕ್ಡೌನ್ ಮಾಡಿದ್ದರಿಂದಾಗಿ, ಕಳೆದ ವರ್ಷ ಶ್ರೀಸಾಮಾನ್ಯರು ನೈಜ ಸ್ವಾತಂತ್ರ್ಯವನ್ನು ಕಳೆದುಕೊಂಡಂಥ ಸ್ಥಿತಿಯನ್ನು ಅನುಭವಿಸಬೇಕಾಯಿತು. ಇನ್ನೇನು ಕೊರೋನಾ ಮಾಯವಾಯಿತು ಎಂಬಂತೆ ತನ್ನ ಸಹಜ ಸ್ಥಿತಿಗೆ ಮರಳಿದ ಭಾರತ, ರಾಜಕೀಯದವರ ಮತ್ತು ಆಡಳಿತಗಾರರ ದೂರದೃಷ್ಟಿಯಿಲ್ಲದ ನೀತಿ-ನಿಯಮಗಳಿಂದಾಗಿ ಈಗ ಕಳೆದ ಬಾರಿಗಿಂತ ಹೆಚ್ಚು ವಿಷಮ ಸ್ಥಿತಿಯನ್ನು ದೇಶದಾದ್ಯಂತ ಎದುರಿಸುವಂತಾಗಿದೆ.

 ಅಷ್ಟಕ್ಕೂ ಏನಿದು ಆಮ್ಲಜನಕ ಕೊರತೆ?

    ಸಾಮಾನ್ಯವಾಗಿ ಆಮ್ಲಜನಕವನ್ನು  ಕಬ್ಬಿಣ ಮತ್ತು ಉಕ್ಕಿನ ಉದ್ಯಮ, ಆಸ್ಪತ್ರೆಗಳು, ಔಷಧೀಯ ಘಟಕಗಳು ಮತ್ತು ಗಾಜಿನ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಕೈಗಾರಿಕ ಮತ್ತು ವೈದ್ಯಕೀಯ ಆಮ್ಲಜನಕವು ಲಭ್ಯವಿರುವ ಎರಡು ಆಮ್ಲಜನಕದ ವಿಭಾಗಗಳಾಗಿದ್ದು, ಸದ್ಯಕ್ಕೆ ಕೈಗಾರಿಕಾ ಆಮ್ಲಜನಕವನ್ನು ದಹನ, ಆಕ್ಸಿಡೀಕರಣ, ಕತ್ತರಿಸುವುದು ಮತ್ತು ರಾಸಾಯನಿಕ ಪ್ರಕ್ರಿಯೆಗಳು ಸೇರಿದಂತೆ ಕೈಗಾರಿಕಾ ಸ್ಥಾವರಗಳ ಬಳಕೆಯಲ್ಲಿ ಉಪಯೋಗಿಸಲಾಗುತ್ತದೆ. ಆಮ್ಲಜನಕದ ಶುದ್ಧತೆಯ ಮಟ್ಟವು ಮಾನವ ಬಳಕೆಗೆ ಸೂಕ್ತವಾಗಿರುವುದಿಲ್ಲ. ಆದರೆ, ವೈದ್ಯಕೀಯ ಆಮ್ಲಜನಕವು ಹೆಚ್ಚಿನ ಶುದ್ಧತೆಯಿಂದ ಕೂಡಿದ್ದು ವೈದ್ಯಕೀಯ ಚಿಕಿತ್ಸೆಗೆ ಬಳಸಲು ಅಭಿವೃದ್ಧಿಪಡಿಸಲಾಗಿದೆಇದನ್ನು ಅರವಳಿಕೆಪ್ರಥಮ ಚಿಕಿತ್ಸೆಯಂತಹ ತುರ್ತುಪರಿಸ್ಥಿತಿಯಲ್ಲಿ ರೋಗಿಗಳನ್ನು ಪುನಶ್ಚೇತನಗೊಳಿಸಲು, ಉಸಿರಾಡಲು ಸಾಧ್ಯವಾಗದ ರೋಗಿಗಳಿಗೆ ಜೀವ ವಾಯುವನ್ನು ಬೆಂಬಲವಾಗಿ ನೀಡಲು ಮತ್ತು ಆಮ್ಲಜನಕ ಚಿಕಿತ್ಸೆಯ ಸಂದರ್ಭಗಳಲ್ಲಿ  ಬಳಸಲಾಗುತ್ತದೆ.

    ಪ್ರಸ್ತುತ ಸಂದರ್ಭದ ಆಮ್ಲಜನಕ ಕೊರತೆಯು ಕೋವಿಡ್ ಕಾರಣಗಳಿಗಾಗಿ ಉಲ್ಬಣಗೊಂಡಿದ್ದು, ಕಳೆದ ಕೆಲವು ವಾರಗಳಿಂದ ಆರೋಗ್ಯ ವ್ಯವಸ್ಥೆಯು ದೇಶದಲ್ಲಿ ಆಘಾತಕಾರಿ ಮತ್ತು ಸ್ಮಶಾನ ಸ್ಥಿತಿಯನ್ನು ಸೃಷ್ಟಿಸಿದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾದಾಗ ಅಂದರೆ ಹೈಪೋಕ್ಸೆಮಿಯಾ (Hypoxemia) ಹೊಂದಿರುವ, ತೀವ್ರತೆಯ ಲಕ್ಷಣದ ಕೋವಿಡ್ ರೋಗಿಗಳಿಗೆ ಆಮ್ಲಜನಕ ಚಿಕಿತ್ಸೆಯು ನಿರ್ಣಾಯಕವಾಗಿದ್ದು,   ಈಗ ಇದರ ಅಲಭ್ಯತೆಯು ಕೋವಿಡ್ ನಿಂದ ಬಳಲುತ್ತಿರುವವರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತಿದೆ. ಕೆಲವು ಕ್ಲಿನಿಕಲ್ ಅಧ್ಯಯನಗಳ ಪ್ರಕಾರ ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾಲು ಭಾಗದಷ್ಟು ಮತ್ತು ತೀವ್ರ ನಿಗಾ ಘಟಕಗಳಲ್ಲಿರುವ ಮೂರನೇ ಎರಡರಷ್ಟು ರೋಗಿಗಳಿಗೆ ಆಮ್ಲಜನಕ ಚಿಕಿತ್ಸೆಯ ಅಗತ್ಯವಿದೆಯೆಂದು ಹೇಳಲಾಗುತ್ತಿದೆ. ಕಾರಣಕ್ಕಾಗಿಯೇ, ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇವತ್ತಿನ ಜರೂರಾಗಿದೆ. ಇಲ್ಲಿ ಮರೆಯಲೇಬಾರದ ವಿಷಯವೇನೆಂದರೇ, ಕೊರೋನಾ ರೋಗವು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.   ಮೂಲಕ ಸೋಂಕಿಗೆ ಒಳಪಟ್ಟ ರೋಗಿಯ ಉಸಿರಾಟವನ್ನು ನಿಲ್ಲಿಸುತ್ತದೆ ಎಂಬುದು.

 ಭಾರತದಲ್ಲಿ ಪ್ರಸ್ತುತ ಆಮ್ಲಜನಕ ಸ್ಥಿತಿ!

          CRISIL ಸಂಸ್ಥೆಯ ತಜ್ಞರ ಪ್ರಕಾರ ಕೋವಿಡ್ - 19 ಮೊದಲು ವೈದ್ಯಕೀಯ ಆಮ್ಲಜನಕದ ಅವಶ್ಯಕತೆಯು 2020 ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ದಿನಕ್ಕೆ ಸುಮಾರು 700 ರಿಂದ 800 ಟನ್ ಗಳಷ್ಟಿತ್ತು. ಪ್ರಸ್ತುತ ಏಪ್ರಿಲ್ ಎರಡನೇ ವಾರದಲ್ಲಿ ಪ್ರತಿದಿನ ಇದು 3500 - 4000 ಟನ್ಗಳಿಗೆ ಹೆಚ್ಚಾಗಿದ್ದು, ಕೋವಿಡ್ ಎರಡನೇ ಅಲೆಯ ತೀವ್ರತೆಯು ಹೀಗೆ ಮುಂದುವರಿದರೆ, ಆಮ್ಲಜನಕದ ಅವಶ್ಯಕತೆಯು ದಿನಕ್ಕೆ 6000 - 7000 ಟನ್ ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.  ಆದಾಗ್ಯೂ ಭಾರತದಲ್ಲಿ ಈಗ ಸುಮಾರು 7000 ಟನ್ ಗಳಷ್ಟು ಕೃತಕ ಆಮ್ಲಜನಕ ಉತ್ಪಾದನೆಗೊಳ್ಳುತ್ತಿದ್ದು, ಬಹುತೇಕ ಉತ್ಪಾದನೆಯು ಕೈಗಾರಿಕ ಬಳಕೆಗೆ ಮೀಸಲಾಗಿದೆ.

    ಭಾರತವು ಕೋವಿಡ್ ಮೊದಲ ಅಲೆಯಲ್ಲಿದ್ದಾಗಲೇ, ಸರ್ಕಾರವು 150 ಪ್ಲೆಶರ್ ಸ್ಟಿಂಗ್ ಅಡ್ಸ್ ರ್ಪ್ಷನ್ (PSA) ಆಮ್ಲಜನಕ ಸ್ಥಾವರಗಳಿಗೆ ಟೆಂಡರ್ ಆಹ್ವಾನಿಸಿತ್ತು. ಪ್ರತಿ ನಿಮಿಷಕ್ಕೆ 80,500 ಲೀಟರ್ ಸಾಮರ್ಥ್ಯದ ಆಧಾರದ ಮೇಲೆ ಆಸ್ಪತ್ರೆ ಆವರಣದಲ್ಲೇ ಇವುಗಳನ್ನು ನಿರ್ಮಿಸುವುದು ಇದರ ಯೋಜನೆಯಾಗಿತ್ತು. ಇದರೊಟ್ಟಿಗೆ PM CARES ನಿಂದ ಸುಮಾರು 201.58 ಕೋಟಿ ರೂಗಳನ್ನು ಮೀಸಲಿಟ್ಟು ದೇಶದಾದ್ಯಂತ ಸುಮಾರು 162 PSA ಗಳನ್ನು 154.19 ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಸ್ಥಾಪಿಸುವುದಾಗಿ 2021 ಜನವರಿಯಲ್ಲಿ ಘೋಷಿಸಿತು.  ಆದರೆ ಏಪ್ರಿಲ್ 18 ತನ್ನ ಟ್ವೀಟ್ ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇವುಗಳಲ್ಲಿ ಕೇವಲ 33 PSA ಗಳನ್ನು ಮಾತ್ರ ಸ್ಥಾಪಿಸಲಾಗಿದೆ ಎಂದು ಘೋಷಿಸಿತು.  ಅಂತೆಯೇ ಏಪ್ರಿಲ್ ಅಂತ್ಯದ ವೇಳೆಗೆ 59 ಮತ್ತು ಮೇ ಕೊನೆಗೆ 80 PSA ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ.  ಹೊತ್ತಿನಲ್ಲೆ ಅಂದರೇ, ಏಪ್ರಿಲ್ 2020 ಮತ್ತು ಜನವರಿ 2021 ನಡುವೆ ಭಾರತವು ವಿಶ್ವದಾದ್ಯಂತ 9,301 ಮೆಟ್ರಿಕ್ ಟನ್ ಆಮ್ಲಜನಕವನ್ನು ರಪ್ತು ಮಾಡಿತ್ತು ಎಂಬುದು ಗಮನಿಸಬೇಕಾದ ಅಂಶ.

ಆಮ್ಲಜನಕದ ಕೊರತೆ ಮತ್ತು ಸಾವು

      ಕೊರೋನಾ ಎರಡನೇ ಅಲೆಯ ಭೀಕರತೆಯು ಪ್ರಾಣವಾಯುವಿನ ಕೊರತೆಯನ್ನು ಇನ್ನಷ್ಟು ಹೆಚ್ಚಿಸಿರುವುದು ಆತಂಕಕ್ಕೀಡುಮಾಡಿರುವುದಂತು ಸುಳ್ಳಲ್ಲ. ಇದಕ್ಕೆ ಸಾಕ್ಷಿಯಾಗಿ ಒಂದೇ ದಿನದಲ್ಲಿ ಚಾಮರಾಜನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 24 ಜನರ ಸಾವು, ಶನಿವಾರ 1ರಂದು ದೆಹಲಿಯ ಬಾತ್ರ ಆಸ್ಪತ್ರೆಯಲ್ಲಿ 12 ಜನರ ಸಾವು, ಕಲಬುರ್ಗಿಯ ಅಫ್ಜಲ್ಪುರ ದಲ್ಲಿ 4 ಜನರ ಸಾವು, 6 ಜನರ ಸಾವು ಬೆಂಗಳೂರಿನಲ್ಲಿ  ಮತ್ತು ಪ್ರತಿನಿತ್ಯ ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವವರ ಪ್ರಮಾಣ ಹೆಚ್ಚುತ್ತಲೇ ಇದೆ.  ಕೊರೋನಾ ಮತ್ತು ಇನ್ನಿತರ ವೈದ್ಯಕೀಯ ಕಾರಣಗಳಿಗಾಗಿ ಆಮ್ಲಜನಕ ಕೊರತೆಯು ಹೇಗೆ ಸಾವಿಗೆ ಕಾರಣವಾಗುತ್ತದೆಯೋ, ಹಾಗೆಯೇ ಇಂಟರ್ ಡಿಸಿಪ್ಲಿನರಿ ಜರ್ನಲ್ ಲ್ಯಾನ್ಸೆಟ್ ಪ್ಲನೆಟರಿ ವರದಿಯ ಪ್ರಕಾರ 2019 ರಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ 17 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.

    ಒಟ್ಟಿನಲ್ಲಿ ಆಮ್ಲಜನಕದ ಅವಶ್ಯಕತೆಯು ವೈದ್ಯಕೀಯ ಕಾರಣಕ್ಕಾಗಿ ಅತ್ಯಂತ ತುರ್ತಾಗಿ ಬೇಕಾಗಿದೆ. ಕೊರೋನಾ ಸಾಂಕ್ರಾಮಿಕ ರೋಗವು ಅವಶ್ಯ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುತ್ತಲೇ ಇದ್ದು, ಸಂಬಂಧಪಟ್ಟ ಸರ್ಕಾರಗಳು ಮತ್ತು ಇಲಾಖೆಗಳು ನಿಟ್ಟಿನಲ್ಲಿ ಕ್ರಮವಹಿಸುವುದು ಇಂದಿನ ಜರೂರಾಗಿದೆ. 2017 ರಲ್ಲಿ  ಉತ್ತರಪ್ರದೇಶದ ಗೋರಕ್ ಪುರದಲ್ಲಿ ಇದೇ ಆಮ್ಲಜನಕದ ಕೊರತೆಯಿಂದ ನೂರಾರು ಮಕ್ಕಳು ಒಂದೇ ಬಾರಿಗೆ ಸಾವನ್ನಪ್ಪಿದ್ದಾಗಿನಿಂದ, ಇಂದಿನ ರೋಗ ಲಕ್ಷಣದವರೆಗೆ ವೈದ್ಯಕೀಯ ಕ್ಷೇತ್ರದ ಆಮ್ಲಜನಕ ಬೇಡಿಕೆಯು ಈಡೇರದೆ ಇರುವುದಂತು,  ರಾಜಕಾರಣಿಗಳ ಮತ್ತು ಆಡಳಿತಗಾರರ ಅದಕ್ಷತೆಯನ್ನು ಎತ್ತಿ ತೋರಿಸುತ್ತಿದೆ.

      ಅಂದಹಾಗೆ, ನಮ್ಮ ವಾತವರಣದಲ್ಲಿ ನಾವು 100 ಪ್ರತಿಶತ ಆಮ್ಲಜನಕವನ್ನು ಉಸಿರಾಡುತ್ತಿದ್ದೇವೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಆದರೆ ಇದು ನಿಜವಲ್ಲ. ನಾವು ಉಸಿರಾಡುವ ಗಾಳಿಯು ಸುಮಾರು 21% ಆಮ್ಲಜನಕ ಮತ್ತು 78% ಸಾರಜನಕದಿಂದ ಕೂಡಿದ್ದು, ಕೊನೆಯ 1% ಇಂಗಾಲದ ಡೈಯಾಕ್ಸೈಡ್ ಮತ್ತು ಹೈಡ್ರೋಜನ್ ನಂತಹ ಇತರ ಅನಿಲಗಳ ಮಿಶ್ರಣವಾಗಿದೆಒಟ್ಟಾರೆಯಾಗಿ ಪ್ರಕೃತಿದತ್ತವಾಗಿ ಸಿಗುವ ಪ್ರಾಣವಾಯು ಹಲವು ಅಂಶಗಳ ಒಟ್ಟು ಮೊತ್ತವಾಗಿದ್ದು, ಬೆಲೆತೆತ್ತು ಉಸಿರಾಡುವಂತಹ ಸ್ಥಿತಿಗೆ ತಲುಪಿರುವುದು ಕಾಲದ ದೊಡ್ಡ ದುರಂತ.


Sunday, February 28, 2021

ಗ್ಯಾಡ್ಜೆಟ್ ಮತ್ತು ನಾವು

ಸಂದೀಪ್ ಎಸ್ ರಾವಣೀಕರ್



ತಂತ್ರಜ್ಞಾನದೊಂದಿಗೆ ತಳುಕು ಹಾಕಿಕೊಂಡಿರುವ ಇಂದಿನ ಬದುಕು, ಶರವೇಗದ ಫಲಿತಾಂಶವನ್ನು ಪಡೆಯುವಲ್ಲಿ ಯಾವುದೇ ಕಷ್ಟ ಪಡುತ್ತಿಲ್ಲ. ಕ್ಷಣಮಾತ್ರದ ಬದಲಾವಣೆಗೆ ಕಂಡು ಕೊಳ್ಳಬೇಕಾದ ಯಾವುದೇ ವಿಷಯವನ್ನು ಒಂದು ಕ್ಲಿಕ್ಕಿನಲ್ಲಿ ಪಡೆದುಕೊಳ್ಳುವ ಸಾಕಷ್ಟು ಬುದ್ಧಿಮತ್ತೆಯನ್ನು ಮನುಷ್ಯ ತನಗಾಗಿ ಆವಿಷ್ಕರಿಸಿಕೊಂಡಾಗಿದೆ. ಹಾಗೆಯೇ ನನ್ನ ನಿಲುವಿಗೆ ಯಾವುದು ಸರಿಸಾಟಿಯಿಲ್ಲವೆಂಬಂತೆ, ಎಲ್ಲವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಕಂಡುಕೊಳ್ಳುವ ಹಾಗೂ ಬದಲಾಯಿಸಿಕೊಳ್ಳುವ ತಂತ್ರಜ್ಞಾನವನ್ನು ಆಗಿಂದಾಗ್ಗೆ ಅಭಿವೃದ್ಧಿಪಡಿಸುತ್ತಲೇ ಇದ್ದಾನೆ.

                ಇಂತಹ ಜೀವನ ಕ್ರಮದ ಯಾವುದೇ ಮನುಷ್ಯ ಸಂಬಂಧಿ ಕ್ರಿಯೆಯಲ್ಲಿ ಮಾನವ ಸಹಭಾಗಿತ್ವವು ಸಂಬಂಧಗಳ ಒಳಗೊಳ್ಳುವಿಕೆಯ ಭಾಗವಾಗಿರದೆ, ಗ್ಯಾಡ್ಜೆಟ್(Gadget) ಲೋಕಕಷ್ಟೆ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ. ಸಹಕುಟುಂಬ ವಾಸಿಯಾಗಿದ್ದ ಸಂದರ್ಭವು ತಾತ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ,  ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಮಾವ-ಅತ್ತೆ, ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಹಲವು ಬಗೆಯ ಕುಟುಂಬ ಸಂವೇದನೆಯನ್ನು ಹೊಂದಿತ್ತು. ಅಂತೆಯೇ ಶಾಲಾ-ಕಾಲೇಜುಗಳಲ್ಲಿ, ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ, ಪರಊರಿನ ಪರಿಚಯಿಸ್ಥರಲ್ಲಿ, ಓಡಾಟ ಸಂದರ್ಭದ ಪರಿಚಯಗಳಲ್ಲಿ ಮತ್ತು ವಿಚಾರ ವಿನಿಮಯಗಳ ವೇದಿಕೆಗಳಲ್ಲಿ ಒಂದಾಗುವ ಯಾವುದೇ ಸಂದರ್ಭವು ಸ್ನೇಹ ಸಂಬಂಧದಿಂದ ಕೂಡಿರುತ್ತಿತ್ತು. ಆದರೆ ಇದು ಇಂದು ಕೇವಲ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಂತಹ ಸಾಮಾಜಿಕ ಜಾಲತಾಣಗಳಿಗಷ್ಠೆ ಸೀಮಿತಗೊಂಡಿರುವುದು "ಮನುಷ್ಯನು ಸಂಘಜೀವಿ" ಎಂಬ ಸಾಮಾಜಿಕ ಪರಿಕಲ್ಪನೆಯನ್ನು ಅಣಕಿಸುವಂತಿದೆ.

                ವೇಗದ ಬದುಕಿಗೆ ಒಗ್ಗಿರುವ ಮನುಷ್ಯನ ಪಾಲಿಗೆ ಸಾಮಾಜಿಕ ಜಾಲತಾಣ ಅತ್ಯಂತ ಆತ್ಮೀಯ ಸ್ನೇಹಿತನೇ ಆಗಿದೆ. ಕ್ಷಣಮಾತ್ರದಲ್ಲೇ ಎಲ್ಲಾ ಕೆಲಸಗಳು ಮುಗಿದೋಗುವಂತೆ ಪ್ರೇರೇಪಿಸುವ, ಅಂತೆಯೇ ನಮ್ಮಗಳ ಬದುಕನ್ನು ರೂಪಿಸುವ ಹಲವು ಬಗೆಯ ಕಾರ್ಯಚಟುವಟಿಕೆಗಳಿಗೇನು ಕಡಿಮೆ ಇಲ್ಲ ಹಾಗೂ ಇಂಥವುಗಳನ್ನು ನಿರ್ವಹಿಸಲೆಂದೇ ಶುರುವಾಗಿರುವ ಅಪ್ಲಿಕೇಶನ್ಗಳು ಮತ್ತು ಸಂಸ್ಥೆಗಳಿಗೆ ಕೊರತೆ ಇಲ್ಲವೆಂಬಂತೆ ಇಡೀ ವ್ಯವಸ್ಥೆ ಬದಲಾಗಿದೆ.

ಉದಾಹರಣೆಗೆ: ಒಂದು ಬಸ್ಸು ಹತ್ತು ನಿಮಿಷ ತಡವಾದರೆ ಸಹಿಸಲಾಗದ ನಾವು ನಮ್ಮ ಸ್ಥಳ ತಲುಪಲು ಕೂಡಲೇ OLA, UBER, RAPIDO ಗಳಂತಹ ಹಾಗೂ ಒಂದೊತ್ತಿನ ಊಟಕ್ಕೆ ಕೂತಲ್ಲೇ ಕರೆ ತರಿಸುವ ZOMATO, UBER EATS, SWIGGY ಗಳಂತಹ ಅಪ್ಲಿಕೇಶನ್ಗಳನ್ನು ಸುಮ್ಮನೆ ಒಪ್ಪಿಬಿಟ್ಟಿದ್ದೇವೆ

 ಇಂಟರ್ನೆಟ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಅಪ್ಲಿಕೇಶನ್ ಗಳಂತಹ ಆಧುನಿಕ ಸ್ಮಾರ್ಟ್ ಉಪಕರಣಗಳ ಇಂದಿನ ಬದುಕು ಒಗ್ಗುವ ಮುನ್ನ, ಮನುಷ್ಯನ ಎಲ್ಲಾ ಕ್ರಿಯೆಗಳಲ್ಲೂ ಮನುಷ್ಯ ಸಂಬಂಧವನ್ನು ಕಾಣಲು ಸಾಧ್ಯವಾಗಿತ್ತು. ನಿರಂತರ ಪ್ರಕ್ರಿಯೆಯಾಗಿ ರೂಪುಗೊಂಡಿದ್ದ ಬಸ್ ಕಂಡಕ್ಟರ್, ಬ್ಯಾಂಕ್ ಉದ್ಯೋಗಿ, ಹಾಲು ದಿನಸಿ ವ್ಯಾಪಾರಿಯೊಟ್ಟಿಗಿನ ಒಡನಾಟ. ಮೂಲೆಯೊಂದರಲ್ಲಿ ಇಡ್ಲಿ ಬೇಯಿಸುತ್ತಿದ್ದ ಹೋಟೆಲ್ ಉದ್ಯೋಗಿ, ಇಸ್ತ್ರಿ ಮಾಡುವವ, ಕಟಿಂಗ್ ಶಾಪ್ ಒಟ್ಟಿಗಿನ ಮಾತುಕತೆ. ಆಗಿಂದಾಗ್ಗೆ  ಜರುಗುತ್ತಿದ್ದ ಜಾತ್ರೆಯಂತಹ ಸನ್ನಿವೇಶಗಳು, ಮದುವೆ ಸಮಾರಂಭಗಳಲ್ಲಿನ ಪಾಲ್ಗೊಳ್ಳುವಿಕೆ, ಸಾಮೂಹಿಕ ಭೋಜನದಂತಹ ಎಲ್ಲಾ ಸನ್ನಿವೇಶಗಳಲ್ಲೂ ಮನುಷ್ಯನ ಸಹಭಾಗಿತ್ವವು ಎಲ್ಲಾ ಬಗೆಯ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಆಗಿತ್ತು. ಇಂಥಹ ಅದೆಷ್ಟೋ ಸಂದರ್ಭಗಳು ಮನುಷ್ಯನ ಶಾರೀರಿಕ ಮತ್ತು ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿಯಾಗಿ ನಿಲ್ಲುತ್ತಿದ್ದವು.

                ಆಧುನಿಕ ಬದುಕಿನ ಗ್ಯಾಜೆಟ್ ಲೋಕದ ಇಂತಹ ಸಂದರ್ಭವು ಹಲವು ಬಗೆಯ ವಿಚಾರಗಳಿಗೆ ನಮಗೆ ವೇಗವಾಗಿ ಪ್ರತಿಕ್ರಿಯಿಸಿದ್ದಾಗಿಯೂ ಸಹ, ಮನುಷ್ಯ ತಾನು ಹೊಂದಿರುತ್ತಿದ್ದ ಸ್ನೇಹ-ಪ್ರೀತಿ ಸಂಬಂಧಗಳಿಂದ ದೂರವಾಗುತ್ತಿರುವುದಂತು ವಿಷಾದನೀಯ. ಅನಿವಾರ್ಯತೆಯೆನಿಸುವಷ್ಟು ಧಾವಂತದ ಬದುಕಿಗೆ ಒಗ್ಗಿರುವ ನಾವು, ಮನುಷ್ಯ ಸಹಭಾಗಿತ್ವಕ್ಕಿಂತ ಅಜೀವ ವಸ್ತುಗಳೊಟ್ಟಿಗೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ತಾತ್ಕಾಲಿಕ ನಿರಾಳತೆಯನ್ನು ಕೊಡುವ ಗ್ಯಾಜೆಟ್ ಶಾಶ್ವತ ಸಮಸ್ಯೆಯನ್ನು ತಂದೊಡ್ಡಬಲ್ಲ ಆತಂಕ ನಮ್ಮ ಮುಂದಿರುವುದಂತು ಸುಳ್ಳಲ್ಲ

ಇಂದು, ಬ್ಯಾಂಕರ್ ಒಟ್ಟಿಗಿನ ಸ್ನೇಹಪರತೆಯ ವ್ಯವಹಾರವನ್ನು Googlepay, Phonepe, BHIM ಅಂತಹ ಅಪ್ಲಿಕೇಶನ್ಗಳು ಕಿತ್ತುಕೊಳ್ಳುತ್ತಿವೆ.

- ತಿಂಗಳಿಗೊಮ್ಮೆ ಕಾದು ಕುಳಿತು, ಎಲ್ಲಾ ಬಗೆಯ ವಿಚಾರಗಳಿಗೆ ಸಾಕ್ಷಿಯಾಗುತ್ತಿದ್ದ ಬಾರ್ಬರ್ ಶಾಪ್ ಈಗ ಮನೆಗೆ ಆನ್ಲೈನ್ ಬುಕಿಂಗ್ ಮೂಲಕ ಬರುವಂತಾಗಿದೆ.

- ಮನೆಗೆ ಬೇಕಾದ ದಿನಸಿ, ಮನೆ ಸಂಬಂಧಿ ವಸ್ತುಗಳನ್ನು ಹೊರಗಿನ ಮಾರುಕಟ್ಟೆಯಲ್ಲಿ ಮೊದಲು ಖರೀದಿಸುತ್ತಿದ್ದರೆ, ಈಗ ಮನೆಯಲ್ಲೇ ಕೂತು ಒಂದೇ ಕ್ಲಿಕ್ಕಿನಲ್ಲಿ bigbasket, Nature basket, Amazon, Paytm mall, Reliance smart, Flipkart, Myntra ಗಳಂತಹುಗಳಿಂದ ಸಾಧ್ಯವಾಗಿಸಿದೆ.

- ತಿಂಡಿ,ತಿನಿಸು, ಊಟಗಳಲ್ಲಿನ ಮನೆಯ ವೈವಿಧ್ಯತೆಯೂ ಮಾಯವಾಗಿ ಇಂದು ಆನ್ಲೈನ್ ಖರೀದಿ ಅಪ್ ಗಳಾದ ZOMATO, UBER EATS,SWIGGY, KFC, PIZZA HUT  ಗಳಿಂದ ಬರಲಾರಂಭಿಸಿವೆ.

- ಆಗಿಂದಾಗೆ ಆಗುತ್ತಿದ್ದ ಒಂದಷ್ಟು ಭೇಟಿಗಳು ಈಗ Group calling, video calling ಗಳಿಗೆ ಸೀಮಿತವಾಗುತ್ತಿದೆ.

- ಹಬ್ಬ, ಪೂಜೆ, ಹುಟ್ಟಿದ ದಿನ, ಮದುವೆಯಂತಹ ಹಲವು ಸಂದರ್ಭಗಳಿಗೆ WhatsApp Group ಗಳಲ್ಲಿಯೇ ಶುಭಾಶಯ ಕೋರುವುದು ರೂಢಿಯಲ್ಲಿದ್ದರೇಸಾವಿನಂತಹ ದುಃಖದ ವಿಷಯಗಳಿಗೆ ಅದೇ ಗ್ರೂಪ್ ಗಳಲ್ಲಿ RIP ಎಂದು ಮೂರು ಅಕ್ಷರದ ಮೆಸೇಜ್ ಕಾಣಿಸಿಕೊಳ್ಳುತ್ತಿವೆ.

- ಸಂತೋಷ-ದುಃಖದ ಸಂದರ್ಭಗಳಿಗೆ ಸಂಬಂಧಿ - ಸ್ನೇಹಿತರ ವಿಳಾಸ ಹುಡುಕಿ ಕೊಡುತ್ತಿದ್ದ ಆಮಂತ್ರಣ ಈಗ ಕೇವಲ Whatsapp, Messenger ಗಳಿಂದಲೇ ಆಗುತ್ತಿವೆ.

- ಮೊದಲು ಅಜ್ಜಿ ಕಥೆ, ತಾಯಿ ಹಾಡಿನೊಂದಿಗೆ ಊಟ ಮಾಡುತ್ತಿದ್ದ ಮಕ್ಕಳಿಗೆ ಇಂದು  YouTube ನಲ್ಲಿ ಬರುವ Chota Bheem ಹಾಗೂ ಇನ್ನಿತರೇ Animation ವಿಡಿಯೋ ನೋಡಿದರಷ್ಟೆ ಊಟ ಸೇರುವಂತಾಗಿದೆ

- ದೇಸೀಯವಾಗಿದ್ದ ಮರಕೋತಿ, ಚಿನ್ನಿದಾಂಡು, ಗೋಲಿ ಆಟ, ಅಣೆಕಲ್ಲು, ಕೆರೆ ದಡ, ಕಲ್ಲು ಕುಟಿ-ಕುಟಿ, ಲಗೋರಿ, ಕಳ್ಳ-ಪೊಲೀಸ್, ಅಳಿಗುಳಿಮನೆ ಗಳಂತಹ ನೂರಾರು ಬಗೆಯ ಗುಂಪು ಆಟೋಟಗಳು ಇಂದು ಮಾಯವಾಗಿ, ಒಬ್ಬರೇ ಒಂದು ಮೂಲೆಯಲ್ಲಿ ಮೊಬೈಲ್ ಮೂಲಕ ಆಡುವ Gaming app ಗಳು ಸಿಗುತ್ತಿವೆ.

- ಕುಟುಂಬ ಸಮೇತರಾಗಿ ಅಪರೂಪಕ್ಕೆ ಹೋಗುತ್ತಿದ್ದ ಸಿನಿಮಾಗಳು ಈಗ Amazon prime, Hotstar, Netflix ಗಳಲ್ಲಿ ದೊರೆಯುವಂತಾಗಿ ಹೊರಹೋಗುವುದೇ ಕಷ್ಟವಾಗಿದೆ.

- ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿ ತಾಣಗಳು ಈಗ Virtual scenes ಗಳಿಂದ ಇದ್ದಲ್ಲೆ ನೋಡುವಂತಾಗಿದ್ದು, ಮಾನಸಿಕ-ದೈಹಿಕ ನೆಮ್ಮದಿ ಇಲ್ಲದಂತಾಗಿದೆ.

- ಹಲವು ಬಗೆಯಲ್ಲಿ ಓದುವುದಕ್ಕೆ ಸಿಗುತ್ತಿದ್ದ ಪುಸ್ತಕಗಳು, ಇಂದಿನ ಕಾಲಘಟ್ಟಕ್ಕೆ ಆನ್ಲೈನಲ್ಲಿ ಯಾರೋ ಓದಿದ ಧ್ವನಿ ಕೇಳಿಸಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಮೂಲಕ ಓದುವ ಅಭ್ಯಾಸಕ್ಕೆ ತಿಲಾಂಜಲಿ ಇಟ್ಟಾಗಿದೆ.

- ದೇಸೀಯವಾಗಿದ್ದ ಸೋಬಾನೆ ಪದ, ಜನಪದ ಗೀತೆ, ಗಾದೆ, ಒಗಟುಗಳು ಮಾಯವಾಗಿ YouTube, Google ಗಳಲ್ಲಿ ಹುಡುಕಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ.

ಇಂತಹ ಮಾನವ ಸಂಪರ್ಕವನ್ನು ಕಂಡುಕೊಳ್ಳದ ಕಾರ್ಯಚಟುವಟಿಕೆಗಳು ಮನುಷ್ಯನ ವಯಕ್ತಿಕ ಮತ್ತು ಸಹಜೀವನದ ಮೇಲೆ ಬೀರಬಲ್ಲ ಪರಿಣಾಮವನ್ನು ಲೆಕ್ಕಿಸುವುದು ಇಂದಿನ ಜರೂರಾಗಿದೆ. ಬದುಕಿನ ಬಹುದೊಡ್ಡ ಭಾಗವಾಗಿ ರೂಪಿತವಾಗಿರುವ ಇಂದಿನ ಅಭ್ಯಾಸದಿಂದ, ಯಾವುದೇ ಸಂಬಂಧವು ಗಟ್ಟಿಕೊಳ್ಳಬೇಕಾದ ಬದುಕಿನಲ್ಲಿ ಹತಾಶೆ, ಏಕಾಂಗಿತನ, ನೋವು, ದ್ವೇಷ, ಅಸೂಯೆ, ಸ್ವಾರ್ಥ ಗಳಷ್ಟೇ ಮೇಲ್ಪಂಕ್ತಿಯಲ್ಲಿವೆ.  ಇದಕ್ಕೆ ಪುಷ್ಟಿ ನೀಡುವಂತೆ ಆಧುನೀಕರಣದ ಹಲವು ಬಗೆಯ ಉಪಕರಣಗಳು ನಮ್ಮನ್ನು ಒಪ್ಪಿಸಿ ಒಗ್ಗಿಸಿಕೊಳ್ಳುತ್ತಿವೆ.

                ಮನುಷ್ಯ ಕೇಂದ್ರಿತವಾಗಿಯೇ ರೂಪುಗೊಂಡ ಎಲ್ಲ ಬಗೆಯ ಅನ್ವೇಷಣೆಗಳು ಮನುಷ್ಯನ ಅಭಿವೃದ್ಧಿಗೆ ಪೂರಕವಾಗಿರುವುದಕ್ಕೆ ರೂಪಿತಗೊಂಡವು ಎಂಬುದು ಸರ್ವವಿಧಿತ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯ ಸಂಬಂಧವನ್ನು ಹಾಳು ಮಾಡಿಕೊಳ್ಳುವಷ್ಟು ದೂರವಾಗುವುದು ಮಾತ್ರ ಬದುಕಿನ ದೊಡ್ಡ ದುರಂತವೇ ಸರಿ. ಜೀವನವ ಜೀವಿಸಬೇಕೆನಿಸುವಷ್ಟು ಜೀವಂತಿಕೆಯನ್ನು ನಮ್ಮ ಸುತ್ತಮುತ್ತಲಿನಲ್ಲೇ ಕಂಡುಕೊಂಡು ತಾತ್ಕಾಲಿಕ ಬದುಕಿನ ಒಡನಾಡಿಯಾದ ಉಪಕರಣಗಳನ್ನು ಮಿತವಾಗಿ ಬಳಸುವುದು ಸೂಕ್ತ ಮಾರ್ಗವೆನಿಸುತ್ತದೆ. ಏನಂತೀರಾ?

Sunday, November 15, 2020

ಅಂತಿಮಗೊಳ್ಳದ ಅನಿವಾರ್ಯತೆಗಳು !

        ಸಂದೀಪ್ ಎಸ್ ರಾವಣೀಕರ್



 ಅನಿವಾರ್ಯ ಏನು ಮಾಡಲು ಸಾಧ್ಯವಿಲ್ಲ..! ಎಂಬುದರಿಂದಲೇ ಪ್ರಾರಂಭವಾಗುವ ಅದೆಷ್ಟೋ ಮಾತುಗಳಲ್ಲಿ, ಅನಿವಾರ್ಯತೆಯು ನಮ್ಮಗಳ ಬದುಕಿನಲ್ಲಿ ಆಹ್ವಾನವಿಲ್ಲದ ಅತಿಥಿಯಂತೆ ಪ್ರವೇಶಿಸಿರುತ್ತದೆ.  ನಮ್ಮಗಳ ಆಯ್ಕೆಯೇ ಅಲ್ಲದ ಕಾರಣವಾಗಿ ಬರುವ 'ಅನಿವಾರ್ಯತೆ' ಅಪರಿಮಿತ ಆಕಾಶದಷ್ಟೇ ಅಗಲ, ಭೂಮಿಯ ಅಂತರಾಳದಷ್ಟೇ ಆಳವಿರುವ ಅಂತಿಮಗೊಳ್ಳದ ಸೃಷ್ಟಿಯಾಗಿದೆ. ಒಂದನ್ನು ಪಡೆದಾಕ್ಷಣ ಮತ್ತೊಂದರ ಬಯಕೆಯ ಕಡೆಗೆ ಓಡುವ ನಾವು ಯಾವುದರಲ್ಲೂ ಅಂತಿಮಗೊಳ್ಳುವುದಿಲ್ಲ. ಮನುಷ್ಯನ ಉಗಮದಿಂದ ಇಲ್ಲಿಯವರೆಗೂ, ಬೇರೆ ಬೇರೆ ಸಮಯ-ಸಂದರ್ಭಗಳ ಕಾರಣಗಳಿಗಾಗಿ ರೂಪುಗೊಂಡ ಅನಿವಾರ್ಯತೆಗಳು ಹಲವುಗಳ ಉಗಮಕ್ಕೆ ಕಾರಣವಾಗಿರುವುದಂತು ಸುಳ್ಳಲ್ಲ.

ಬದುಕಿನ ಕ್ರಮದಲ್ಲಿನ ಅವಶ್ಯಕಗಳನ್ನು ನಿರ್ಧರಿಸಿ, ಪಟ್ಟಿಮಾಡಿ ಪಡೆಯುತ್ತಿದ್ದ ಹಿಂದಿನ ವಸ್ತುಗಳ ಅನಿವಾರ್ಯಕ್ಕೂ, ಸೃಷ್ಟಿಯಾಗುತ್ತಿರುವ ವಸ್ತುಗಳಿಗಾಗಿಯೇ ಬದುಕಿನ ಕ್ರಮವನ್ನು ಬದಲಾಯಿಸಿಕೊಳ್ಳಬೇಕಾದ ಇಂದಿನ ಅನಿವಾರ್ಯತೆಗೂ ಹೋಲಿಸಿದಾಗ, ಅನಿವಾರ್ಯತೆ ಎಂಬುದು ಆಯಾ ಕಾಲಘಟ್ಟದ ಅನುಕೂಲ ಸಿಂಧುವಾಗಿ ಕಾಣಿಸುತ್ತದೆ. ಕೇವಲ ವಸ್ತುವಿನ ಭಾಗವಾಗಿ ಇರದ ಅನಿವಾರ್ಯತೆಯು, ಬದುಕಿನ ಪ್ರತಿ ಹೆಜ್ಜೆಯಲ್ಲೂ ಸೃಷ್ಟಿಯಾಗಿ ತನ್ನ ಕೊನೆ ಫಲಿತಾಂಶದ ಹೊರತಾಗಿಯೂ ತನ್ನದೇ ಇನ್ನೊಂದು ಅನಿವಾರ್ಯತೆಯನ್ನು ಸೃಷ್ಟಿಸದೇ ಇರಲಾರದು. ಅಂದರೇ, ಅನಿವಾರ್ಯತೆಗಳಿಗೆ ಒಳಗಾಗುವ ಪ್ರತಿಯೊಬ್ಬರೂ ತೆಗೆದುಕೊಳ್ಳುವ ನಿರ್ಧಾರಗಳು ಒಂದಲ್ಲ ಒಂದು ಕಾರಣ ಮತ್ತು ಸಂದರ್ಭಗಳಿಗೆ ಸಂಬಂಧಿಸಿದ್ದಾದರೂ ಸಹ, ಅದೇ ಕಾರಣ ಮತ್ತು ಸಂದರ್ಭಗಳು ಒಂದು ರೀತಿಯ ಅನಿವಾರ್ಯವೇ ಆಗಿರುತ್ತವೆ.

                ಯೋಚಿಸಿ-ಯೋಜಿಸಿ ಕಟ್ಟಿಕೊಳ್ಳುವ ಚೌಕಟ್ಟಿನ ಬದುಕು ಸಹ ಅನಿವಾರ್ಯ ಕಾರಣಗಳಿಂದ ಚೌಕಟ್ಟಿನಾಚೆಗೆ ತೆರೆದುಕೊಳ್ಳುತ್ತದೆ. ಜೀವಿಸುವುದರಲ್ಲಿನ ಬಯಕೆ, ಗೊಂದಲ, ಕಷ್ಟ, ಅವಮಾನ, ಅನುಮಾನ,  ದ್ವೇಷ, ಅಸೂಹೆ, ಮನಸ್ತಾಪ, ಬೇಜಾರು, ನೋವುಗಳನ್ನು ಇಟ್ಟುಕೊಂಡೆ ಇಡೀ ಜೀವನವ ಅಪರಿಪೂರ್ಣವಾಗಿಯೇ ದೂಡುವ  ಅನಿವಾರ್ಯತೆಯ ಸಂದರ್ಭಗಳಿಗೆ,  ಪರಿಹಾರವಾಗಿ ಕಾಣುವ ಸ್ಪಷ್ಟತೆ, ಹೊಂದಬಹುದಾದ ಬಯಕೆ, ಸನ್ಮಾನ, ನಂಬಿಕೆ, ಮಮತೆ, ಸುಖ, ನೆಮ್ಮದಿಗಳ ಸೃಷ್ಟಿಯ ಪರಿಪೂರ್ಣತೆಯ ಅನಿವಾರ್ಯತೆ   ಹೊತ್ತಿಗೆ ಜರೂರಿದೆ.

ವಿವಿಧ ಆಯಾಮ-ಕ್ರಮಗಳಾಚೆಗಿನ ಎಲ್ಲಾ ಸಂದರ್ಭಗಳಿಗೂ ಯಾವುದೇ ಬಗೆಯ ಉತ್ತರವಾಗಿ ನಿಲ್ಲುವ 'ಅನಿವಾರ್ಯತೆಯು' ಕೇವಲ ವಾಸ್ತವವಾಗಿಯಷ್ಟೇ ನಮ್ಮ ಮುಂದಿದೆ. ಅನಿವಾರ್ಯತೆಗೆ ಒಳಗಾಗದ ಸಂದರ್ಭ ಸೃಷ್ಟಿಯು ಕಾಲಘಟ್ಟದಲ್ಲಿ ಅನುಮಾನವೇ ಸರಿ. ಏಕೆಂದರೆ ಅನಿವಾರ್ಯ ಬದುಕಿದ್ದೀನಿ! ಅನ್ನುವುದರಿಂದ ಅನಿವಾರ್ಯವಾಗಿ ಸಾಯಲೇಬೇಕು! ಅನ್ನುವುದರಲ್ಲಿನ ಅಂತರದಲ್ಲಿ ಜರುಗಬಹುದಾದ ಹಲವು ಪರಿಸ್ಥಿತಿಗಳಿಗೆ ಮತ್ತದೇ 'ಅನಿವಾರ್ಯ' ಕಾರಣವಾಗಿರುತ್ತದಲ್ಲವೇ ? ಒಟ್ಟಿನಲ್ಲಿ, ಯಾರ ಕೊನೆಯಲ್ಲೂ ಅಂತಿಮಗೊಳ್ಳದ ಅನಿವಾರ್ಯತೆಗಳು, ಅನಿವಾರ್ಯತೆಗಳಾಗಿಯೇ ಉಳಿದುಬಿಡುತ್ತವೆ!

Wednesday, October 7, 2020

ಪ್ರೀತಿ ಮತ್ತು ನಾವು

      - ಸಂದೀಪ್ ಎಸ್ ರಾವಣೀಕರ್



ಪ್ರೀತಿಯ ಒತ್ತಾಸೆಯಲ್ಲಿ ಕನಸು ಕಟ್ಟಿಕೊಳ್ಳುವ ನಾವುಗಳು, ಜೀವನದ ಪ್ರತಿಗಳಿಗೆಯನ್ನು ಪ್ರೀತಿ ಹುಟ್ಟಿದ ಮೊದಲ ಸಮಯದ ಅನುಭವದಂತೆ ಬಯಸುತ್ತಾ ಆಶಾವಾದಿಯಾಗಿರುವುದು ಸರ್ವೇಸಾಮಾನ್ಯ. ಪ್ರೀತಿಸುವ ಸಮಯದಲ್ಲಿ ಕಾಣುವ ಕೇವಲ ಪ್ರೀತಿಯನ್ನಷ್ಟೆ ಜೀವನ ಕ್ರಮವೆಂದು ಭ್ರಮಿಸುವ ನಾವುಗಳು, ಜೀವನ ಕ್ರಮದ ಹಲವು ಹಂತಗಳನ್ನು ಲೆಕ್ಕಿಸುವುದೇ ಇಲ್ಲ. ಪ್ರೀತಿಗೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಸೋಲಿಸುವ ಶಕ್ತಿ ಇದೆ ಎಂದೇ ಭಾವಿಸುವ ನಾವುಗಳು, ಪ್ರೀತಿಯಾಚೆಗಿನ ಪ್ರತಿ ಬದುಕಿನ ಅನುಕ್ರಮಗಳನ್ನು ಅಷ್ಟೇ ಪ್ರೀತಿಯಿಂದ ನೋಡುವುದಿಲ್ಲ ಹಾಗೂ ಅನುಸರಿಸುವುದಿಲ್ಲ ಅನ್ನೋದು ಅಷ್ಟೇ ಸತ್ಯ ಕೂಡ. ಪ್ರೀತಿಯಲ್ಲಿ ಪ್ರೀತಿಯಷ್ಟೇ ಇರಬೇಕೆನ್ನುವುದು ಸರ್ವವಿಧಿತ, ಆದರೆ ಭಿನ್ನ ಆಲೋಚನಾ ಕ್ರಮಗಳನ್ನು, ಪ್ರತಿಯೊಬ್ಬರ ಅಭಿರುಚಿ-ಅಭಿಪ್ರಾಯಗಳನ್ನು ಗೌರವಿಸುವ, ಇಷ್ಟಕ್ಕೇ ಬಾರದ ಎಷ್ಟೋ ಒಳ್ಳೆ ವಿಷಯಗಳನ್ನು ಅಷ್ಟೇ ಪ್ರೀತಿಯಿಂದ ಕಾಣುವ ಮತ್ತು ಅನುಸರಿಸುವ ಕಾರ್ಯಕ್ಕೆ ಮಾತ್ರ ಬೆನ್ನು ತೋರಿಸುವುದು ಸಾಧುವಲ್ಲ. ಏಕೆಂದರೆ ಪ್ರೀತಿಯಲ್ಲಿ  ದ್ವೇಷಕ್ಕೆ, ಗರ್ವಕ್ಕೆ, ಅಸ್ವಾರಸ್ಯಕ್ಕೆ(ego) ಜಾಗವಿಲ್ಲವಲ್ಲ!

ಅಹಂಮಿಕೆಯ ಆಲೋಚನೆಗಳಿಗೆ ಬುದ್ದಿ ಕೊಡುವ ಪ್ರತಿಯೊಬ್ಬರೂ ನಾನು-ನನ್ನ ಎಂಬ ವೈಯಕ್ತಿಕತೆಯನ್ನು ಪ್ರದರ್ಶಿಸುವ ಬದಲಿಗೆ  ನಾವು-ನಮ್ಮ ಎಂಬ ಒಟ್ಟಾರೆ ಒಳಗೊಳ್ಳುವಿಕೆಯನ್ನು ಅನುಸರಿಸಬೇಕಾಗಿರುವುದು ಹೊತ್ತಿನ ಜರೂರು. ಪ್ರತಿಯೊಂದು ಬದುಕಿನ ಜೀವನವನ್ನು ಜೀವಂತಿಕೆಯಾಗಿಡುವ ಅದಮ್ಯಶಕ್ತಿ ಪ್ರೀತಿಗಿದೆ, ಆದರೆ ಅದು ಕೇವಲ ವೈಯಕ್ತಿಕತೆಷ್ಟೆ ಮೀಸಲಾಗಬಾರದು. ವೈಯಕ್ತಿಕ ಬದುಕಿನಾಚೆಗಿನ ಅದೆಷ್ಟೋ ಜೀವನಾನುಭವಗಳಿಗೆ ಪ್ರೀತಿಯ ಕೈಚಾಚಿದರಷ್ಟೆ ಪ್ರೀತಿ ತುಂಬಿದ ಬದುಕಿಗೆ ಅರ್ಥ ಬರುವುದು. ಮದುವೆಯಾದ ಮೂರು, ನಾಲ್ಕು ವರ್ಷಗಳು ತುಂಬುವ ಹೊತ್ತಿಗೆ ನೈಜ ಪ್ರಾಯೋಗಿಕ(practical) ಬದುಕಿನ ನಿಜ ದರ್ಶನವಾಗಿ, ಜವಾಬ್ದಾರಿಗಳ ಹಿಂದೆ ಬಿದ್ದು ಮೊದಲ ಪ್ರೀತಿಯ ಅನುಭವವನ್ನೇ ಮರೆಯುವ ಹಂತಕ್ಕೆ ಬಂದಾಗ ವೈಯಕ್ತಿಕ ಬದುಕಿನ ಮೇಲಿನ ಅಲ್ಪ ನಿರಾಸಕ್ತಿಯು ಕೂಡ ದೊಡ್ಡ ವ್ಯತ್ಯಾಸವನ್ನೇ ತಂದೊಡ್ಡಬಲ್ಲದು. ಬದುಕಿನ ಓಟದಲ್ಲಿ ವೈಯಕ್ತಿಕ ಬದುಕಿನ ಬಗೆಗಿನ ಜವಾಬ್ದಾರಿಯಲ್ಲಿ ಪ್ರೀತಿ ಕಾಣಿಸದ ಹಾಗೆ ಬದುಕುತ್ತಿರುವ ಅದೆಷ್ಟೋ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಇದೇ ಸಂದರ್ಭದಲ್ಲಿ ಅರ್ಥೈಸಿಕೊಳ್ಳಲಾಗದ ಹಲವು ಮನಸ್ಸುಗಳು ದೂರಾಗುವ ಸಂಖ್ಯೆಗಳಿಗೇನು ಕಡಿಮೆ ಇಲ್ಲ. ಆದ್ದರಿಂದ ಬದುಕಿಗೆ ಅರ್ಥ ನೀಡುವ, ವೈಯಕ್ತಿಕ ಜೀವನದ ಸರಿ ಕ್ರಮಗಳಿಗೆ ಆಸರೆಯಾಗಿ ನಿಲ್ಲುವ, ಅಭಿರುಚಿ- ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾಗಿದೆ. ಏಕೆಂದರೆ ಇವುಗಳಷ್ಟೇ ಪ್ರೀತಿಯನ್ನು ಸದಾಕಾಲ ಜೀವಂತವಾಗಿ ಇರುವಂತೆ ನೋಡಿಕೊಳ್ಳಲು ಸಾಧ್ಯ.  ಭಿನ್ನಾಭಿಪ್ರಾಯಗಳು ಮತ್ತು ಭಿನ್ನ ಆಲೋಚನಾ ಕ್ರಮಗಳು ವೈಯಕ್ತಿಕ ಬದುಕಿನೊಟ್ಟಿಗೆ ಬಹುದೂರ ಸಾಗಲಾವು. ಏಕೆಂದರೆ ಅಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವ ಗೌಣವಾಗಿರುತ್ತವೆ.  ಒಪ್ಪಿತವಲ್ಲದ ಬಲವಂತದ ಒಪ್ಪಿಗೆಯಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ. ಅಂತೆಯೇ ಗಟ್ಟಿಗೊಳ್ಳದ ಯಾವ ಸಂಬಂಧಗಳು ದೀರ್ಘಕಾಲ ಉಳಿಯುವುದಿಲ್ಲ. ಹಾಗೆಯೇ ಕಾಂಪ್ರಮೈಸ್ ಎನ್ನುವುದು ಕಡಿಮೆ ಆಯಸ್ಸಿನ ಕ್ರಮವಾಗಿದ್ದು, ಒಂದು ಸಣ್ಣ ಮನಸ್ತಾಪ ಇದನ್ನು ಹಾಳುಗೆಡವುದರಲ್ಲಿ ಅನುಮಾನವೇ ಬೇಡ. ಕವಿ ಎಚ್.ಎಸ್ ವೆಂಕಟೇಶಮೂರ್ತಿ ಅವರ ಇಷ್ಟು ಕಾಲ ಒಟ್ಟಿಗಿದ್ದು  ಎಷ್ಟು ಬೆರೆತರು, ಅರಿತೆವೇನು ನಾವು ನಮ್ಮ ಅಂತರಾಳವ ಎಂಬ ಕವಿತೆಯ ಸಾಲುಗಳು ಸಹ ಪರಸ್ಪರರನ್ನು ಅರಿಯುವುದು ಮತ್ತು ಗೌರವಿಸಿ ಒಟ್ಟಿಗೆ ನಡೆಯುವುದನ್ನೇ ಹೇಳುತ್ತವೆ.

              ಆದ್ದರಿಂದ, ಬದುಕನ್ನು ಬಂದಂತೆ ಸ್ವೀಕರಿಸುವುದಕ್ಕಿಂತ, ಅಂದುಕೊಂಡಂತೆ ಬದಲಾಯಿಸಿಕೊಳ್ಳುವುದು ಜೀವಂತಿಕೆಯ ನಮ್ಮತನದ ಲಕ್ಷಣ. ಹಾಗೆಯೇ ಮಾರ್ಗದಲ್ಲಿ ಗಟ್ಟಿತನ ಇರಬೇಕಾಗಿರುವುದು ಸಹ ಅಷ್ಟೇ ಮುಖ್ಯ. ವೈಯಕ್ತಿಕ ಬದುಕು ಮತ್ತು ಅದರಾಚೆಗಿನ ಬೇರೆ ಬೇರೆ ಅಭಿರುಚಿ-ಆಸಕ್ತಿಯನ್ನು ಪೋಷಿಸಿ, ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಮೂಲಕ emotions ಗೆ ಒಳಗಾಗದೆ, ನಾವು ನಾವು ಗಳಾಗಿ ಬದುಕಬೇಕಿದೆ.